ಶುಕ್ರವಾರ, ಆಗಸ್ಟ್ 5, 2011

ನಮ್ಮಬುಕ್ಸ್ ಬ್ಯಾಂಕಿನ ಪತ್ರಿಕಾ ಜಾಹೀರಾತು


ಈಗ ಎರಡನೇ ಮುದ್ರಣದಲ್ಲಿ ಎರಡು ಪುಸ್ತಕಗಳು

ನಮ್ಮ ಪ್ರಕಾಶನ ಸಂಸ್ಥೆ ಕಳೆದ ವರ್ಷದ ನವೆಂಬರ‍್ - ಡಿಸೆಂಬರ‍್ ತಿಂಗಳಲ್ಲಿ ಪ್ರಕಟಿಸಿದ 'ನೀವೂ ಚೆಲುವೆಯರಾಗಿ...' ಮತ್ತು 'ಕಿಲಕಿಲ' ಪುಸ್ತಕಗಳು, ಕಳೆದ ಎಂಟೊಂಭತ್ತು ತಿಂಗಳಲ್ಲಿ ಅಪಾರ ಖ್ಯಾತಿ ಗಳಿಸಿದ್ದು, ಈ ಎರಡು ಪುಸ್ತಕಗಳ ಎಲ್ಲಾ ಒಂದು ಸಾವಿರ ಪ್ರತಿಗಳೂ ಪೂರ್ತಿಯಾಗಿ ಮಾರಾಟಗೊಂಡಿದೆ. ಇತ್ತೀಚೆಗಷ್ಟೇ ಈ ಎರಡು ಪುಸ್ತಕಗಳು ಎರಡನೇ ಮುದ್ರಣ ಕಂಡಿದೆ ಎಂದು ಹೇಳುವ ಹೆಮ್ಮೆ ನಮಗಿದೆ; ಜೊತೆಗೆ ಕನ್ನಡ ಓದುಗರು ಎಲ್ಲಿಯೂ ಹೋಗಿಲ್ಲ, ನಮ್ಮ ನಡುವೆಯೇ ಇದ್ದಾರೆ, ಅವರಿಗೆ ನಾವು ಒಳ್ಳೆಯ ಪುಸ್ತಕಗಳನ್ನು ತಲುಪಿಸಬೇಕಷ್ಟೇ ಎಂದು ಹೇಳುವ ಖುಷಿಯೂ ನಮ್ಮದಾಗಿದೆ. ಇದು ನಮ್ಮ ಪ್ರಕಾಶನ ಸಂಸ್ಥೆ ಇನ್ನಷ್ಟು ಪುಸ್ತಕಗಳನ್ನು ಪ್ರಕಟಿಸಲು ಸಾಕಷ್ಟು ಧೈರ್ಯವನ್ನೂ ಕೊಟ್ಟಿದೆ. ನಿಮ್ಮ ಪುಸ್ತಕ ಪ್ರೀತಿ ಇದೇ ರೀತಿ ಈ ಬುಕ್ಸ್ ಬ್ಯಾಂಕಿನೊಂದಿಗಿರಲಿ. ಈ ಎರಡು ಪುಸ್ತಕಗಳ ಎರಡನೇ ಮುದ್ರಣದ ಹೊಚ್ಚ ಹೊಸ ಪ್ರತಿಗಳು ನಮ್ಮೆಲ್ಲ ಪುಸ್ತಕ ಮಾರಾಟಗಾರರ ಬಳಿ ಲಭ್ಯವಿದೆ.

ಎಂಟನೇ ಪ್ರಕಟಣೆ - ಹೆಲ್ತಿ ಲೈಫ್ ಸ್ಟೈಲ್ ಎಂದರೇನು?

ಆಯುರ್ವೇದ ವೈದ್ಯರಾಗಿ ಮತ್ತು ವೈದ್ಯ ಸಾಹಿತಿಯಾಗಿ ಹೆಸರು ಗಳಿಸಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಬರೆದಿರುವ ಲೇಖನಗಳ ಸಂಕಲನ 'ಹೆಲ್ತಿ ಲೈಫ್ ಸ್ಟೈಲ್ ಎಂದರೇನು?'. ಈಗಾಗಲೇ ಮಾಸಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿರುವ ಲೇಖನಗಳನ್ನು ಇಲ್ಲಿ ಒಟ್ಟು ಮಾಡಿ ಕೊಡಲಾಗಿದೆ. ಈವರೆಗೆ ಆಯುರ್ವೇದ ವೈದ್ಯ ಪದ್ಧತಿಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿಕೊಡಲು ಲೇಖನಗಳನ್ನು ಬರೆಯುತ್ತಿದ್ದ ಇವರು, ಇಲ್ಲಿ ಬೇರೆ ವಿಷಯಗಳೆಡೆಗೆ ಹೊರಳಿಕೊಂಡಿದ್ದಾರೆ. ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಬರೆದಿರುವ ಸಂಕಲನದ ಲೇಖನಗಳಲ್ಲಿ ಮಾನಸಿಕ ಆರೋಗ್ಯದೊಂದಿಗೆ ದೈಹಿಕ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವಂತಹ ವಿಷಯಗಳೂ ಸೇರಿಕೊಂಡಿದೆ.
ಡಾ.ಕೆ.ಪೂರ್ಣಿಮಾ ಕೋಡೂರು
ಅಮಿತಾಬ್ ಬಚ್ಚನ್ ಮಾಡುತ್ತಿದ್ದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ನಿರೂಪಣೆಯ ಜಾಗಕ್ಕೆ, ಶಾರುಖ್ ಬಂದಾಗ ಯಾಕೆ ಆತನಿಗೆ ಆ ಸ್ಥಾನವನ್ನು ಭರ್ತಿ ಮಾಡಲಾಗಲಿಲ್ಲ ಎನ್ನುವಂತಹ ವಿಷಯದಿಂದಾರಂಭಿಸಿ, ಜಾಸ್ತಿ ಓದಿದರೆ ಕನ್ನಡಕ ಬರುತ್ತದಾ? ತಂದೆ ತಾಯಿಯನ್ನೇ ಹೊಡೆಯುವ ಮಗನಿಗಿರುವ ಮಾನಸಿಕ ಕಾಯಿಲೆ ಯಾವುದು? ಸ್ಲೀಪ್ ಎಪ್ನಿಯಾ ಎಂದರೇನು? ಫೇಲಾದರೆ ಬದುಕು ಮುಗಿದೇ ಹೋಗುತ್ತದಾ? ತಾಯಂದಿರೇಕೆ ತಮ್ಮ ಮಕ್ಕಳನ್ನು ಕೊಲ್ಲುವ ಮಟ್ಟಕ್ಕೆ ಇಳಿಯುತ್ತಾರೆ? ಅಪ್ಪ -ಅಮ್ಮನ ಶವದೆದುರು ಮೂವತ್ತಾರು ಗಂಟೆಯಿದ್ದ ಮಗುವಿನ ಮನಸ್ಸು ಏನನ್ನು ಹೇಳುತ್ತದೆ?ಎನ್ನುವಂತಹ ವಿಷಯದವರೆಗೆ ಮನಸ್ಸು ಮತ್ತು ದೇಹಕ್ಕೆ ಸಂಬಂಧಿಸಿದ ಆತ್ಮೀಯವಾಗಿ ಓದಿಸಿಕೊಳ್ಳುವ ಲೇಖನಗಳು ಈ ಸಂಕಲನದಲ್ಲಿದೆ. ಈಗಾಗಲೇ ಏಳು ಪುಸ್ತಕಗಳನ್ನು ಬರೆದಿರುವ ಇವರ ಎಂಟನೇ ಕೃತಿ ಇದಾಗಿದೆ.
ಒಟ್ಟು 31 ಲೇಖನಗಳನ್ನೊಳಗೊಂಡಿರುವ ಈ ಪುಸ್ತಕ 112 ಪುಟಗಳಲ್ಲಿ ಪ್ರಕಟಗೊಂಡಿದ್ದು, ಬೆಲೆ 60 ರೂಪಾಯಿ. 

ಏಳನೇ ಪ್ರಕಟಣೆ - ಮಂಜು ಕರಗುವ ಮುನ್ನ

ವೃತ್ತಿಯ ನಡುವೆ ತಮ್ಮ ಪ್ರವೃತ್ತಿಯನ್ನು ಕಳೆದುಕೊಳ್ಳದ ದೊಡ್ಡಮನಿ ಎಂ. ಮಂಜುನಾಥರವರು ಬರೆದ ಒಟ್ಟು 57 ಕವನಗಳ ಸಂಕಲನವೇ 'ಮಂಜು ಕರಗುವ ಮುನ್ನ' ಇದು ಮಂಜುನಾಥರವರ ಚೊಚ್ಚಲ ಕವನ ಸಂಕಲನವಾಗಿದ್ದು, ಈ ಸಂಕಲನದ 'ಇದು ಹೃದಯಗಳ ಮಿಲನ' ಎನ್ನುವ ಉಪಶೀರ್ಷಿಕೆಯೇ ಇಲ್ಲಿನ ಕವನಗಳ ಬಗ್ಗೆ ಹೇಳುತ್ತದಾದರೂ, ಕವನಗಳೆಲ್ಲವೂ ಹರೆಯದ ಪ್ರೀತಿಯನ್ನು ಮಾತ್ರ ಒಳಗೊಂಡಿಲ್ಲ. ತಾಯಿಯ ವಾತ್ಸಲ್ಯ, ದೇಶಪ್ರೇಮ, ಪ್ರಕೃತಿ ಪರಿಸರ, ಕನ್ನಡಪ್ರೇಮ, ರಕ್ಷಾಬಂಧನ...ಹೀಗೆ ಬದುಕಿನ ಅನೇಕ ಭಾವಗಳನ್ನುಳ್ಳ ಕವನಗಳನ್ನು ಈ ಸಂಕಲನ ಒಳಗೊಂಡಿದೆ.
ದೊಡ್ಡಮನಿ ಎಂ. ಮಂಜುನಾಥ

ಸಂಕಲನಕ್ಕೆ ಬೆನ್ನುಡಿ ಬರೆದಿರುವ ಖ್ಯಾತ ಕನ್ನಡ ಚಲಚಚಿತ್ರ ಗೀತರಚನಾಕಾರ ಹೃದಯಶಿವ ಅವರು, 'ಯುವ ಮನಸ್ಸುಗಳ ಒಳಲೋಕವನ್ನು ಯಥಾವತ್ತಾಗಿ ತಮ್ಮ ಕಾವ್ಯದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುವ ಇವರ ಗುಣ ಮೆಚ್ಚುವಂಥದ್ದು.ಹೃದಯದಿಂದ ಬಂದದ್ದು ಹೃದಯಕ್ಕೆ ಹತ್ತಿರವಾಗುತ್ತದೆ ಎನ್ನುವ ಮಾತಿನಂತೆ ಇವರ ಕವನಗಳು   ಓದುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತವೆ. ವಿರಹ,ತುಂಟತನ,ಒಂಟಿತನದ ಆರ್ದ್ರತೆ,ಭರವಸೆ,ನಿರೀಕ್ಷೆ,ಕಲ್ಪನಾ ಜಗತ್ತಿನ ವಿಹಾರ,ಹುಚ್ಚು ಭ್ರಮೆಗಳ ತುಯ್ದಾಟ-ಹೀಗೆ ಪ್ರೀತಿಯ ಬೇರೆ ಬೇರೆ ಮುಖಗಳನ್ನು ಎತ್ತಿ ತೋರಿಸುವ ಇವರ ಬರಹ ನೈಜತೆಯಿಂದ ಕೂಡಿದೆ' ಎಂದು ಹೇಳಿರುವ ಈ ಸಾಲುಗಳೇ ಮಂಜುನಾಥ ಅವರ ಕವನಗಳ ಒಳಗನ್ನು ಸ್ಪಷ್ಟವಾಗಿ ತೆರೆದಿಡುತ್ತದೆ. ಈ ಸಂಕಲನಕ್ಕೆ ಕುವೈತ್ ನಲ್ಲಿ ಸಂಶೋಧನಾ ವಿಜ್ಞಾನಿಯಾಗಿರುವ ಡಾ. ಆಜಾದ್ ಮುನ್ನುಡಿ ಬರೆದಿದ್ದಾರೆ.
ಈ ಸಂಕಲನದ ಇನ್ನೂ ಒಂದು ವಿಶೇಷವೆಂದರೆ, ಪ್ರತಿಯೊಂದು ಕವನಗಳಿಗೂ ಒಂದೊಂದು ಚಿತ್ರಗಳನ್ನು ಬಳಸಲಾಗಿದೆ. ಕವನ ಅಥವಾ ಕಥೆಗಳಿಗೆ ರೇಖಾಚಿತ್ರಗಳನ್ನು ಬಳಸುವುದು ಸಹಜ. ಆದರೆ ಈ ಕವನಸಂಕಲನದಲ್ಲಿ ಬಹುಶಃ ಕನ್ನಡದಲ್ಲಿ ಇದೇ ಮೊದಲಬಾರಿಗೆ ಕವನದ ಅರ್ಥಕ್ಕೆ ಹೊಂದುವಂತಹ ಚಿತ್ರಗಳನ್ನು ಬಳಸಲಾಗಿದ್ದು, ಇದು ಸಂಕಲನದ ಅಂದವನ್ನು ಹೆಚ್ಚಿಸಿದೆ.
72 ಪುಟಗಳಲ್ಲಿ ಪ್ರಕಟಗೊಂಡಿರುವ ಮಂಜು ಕರಗುವ ಮುನ್ನ ಕವನ ಸಂಕಲನದ ಬೆಲೆ 50 ರೂಪಾಯಿ.