ಗುರುವಾರ, ಜುಲೈ 7, 2011
ಆರನೇ ಪ್ರಕಟಣೆ - ಪ್ರೀತಿ ಕನವರಿಕೆಗಳು
ಬಿ.ಇ.ಎಲ್ ನಲ್ಲಿ ಸೀನಿಯರ್ ಟೆಕ್ನಿಶಿಯನ್ನಾಗಿ ಕೆಲಸ ಮಾಡುತ್ತಿರುವ ವಿ.ಶೇಷಾದ್ರಿಯವರು ಬರೆದ 50 ಪ್ರೀತಿ ಕುರಿತ ಕವನಗಳ ಸಂಕಲನ 'ಪ್ರೀತಿ ಕನವರಿಕೆಗಳು'. ಇಲ್ಲಿರುವ ಎಲ್ಲಾ ಕವನಗಳು ಪ್ರೀತಿ - ಪ್ರೇಮ ಮತ್ತು ಹೃದಯ -ಭಾವನೆಗಳ ಸುತ್ತಲೇ ಸುತ್ತುತ್ತದೆ. ಅದಕ್ಕೆ ಈ ಸಂಕಲನಕ್ಕೆ "ಹೃದಯದ ತೋಟದಲ್ಲರಳಿದ ಪ್ರೀತಿಯ ಹೂವುಗಳು" ಎನ್ನುವ ಉಪಶೀರ್ಷಿಕೆಯನ್ನು ನೀಡಲಾಗಿದೆ. ಪ್ರತೀ ಕವನಕ್ಕೂ ಒಂದೊಂದು ರೇಖಾಚಿತ್ರವನ್ನು ಬಳಸಿರುವುದು ಈ ಸಂಕಲನದ ಸೊಬಗನ್ನು ಹೆಚ್ಚಿಸಿದೆ. ಈ ಸಂಕಲನದ ಮುನ್ನುಡಿ ಬರೆದಿರುವ ಪ್ರೊ.ಚಂದ್ರಶೇಖರ ಪಾಟೀಲ ಅವರೇ ಹೇಳುವಂತೆ, "ತನ್ನ ಅನುಭವದ ನೋವು - ನಲಿವುಗಳನ್ನು ಯಾವುದೇ ನಿಯಮಗಳ ಎಗ್ಗಿಲ್ಲದೆ ನೂರಾರು ಶಬ್ದಗಳಲ್ಲಿ ಹಂಚಿಕೊಂಡಿದ್ದಾರೆ. "ಪ್ರೀತಿ" ಎಂಬುದರ ಹಲವಾರು ಮಗ್ಗಲುಗಳು ಇಲ್ಲಿತೆರೆದುಕೊಂಡಿದೆ. ತನ್ನದೆಲ್ಲವನ್ನು ಹಂಚಿಕೊಳ್ಳಬೇಕೆಂಬ ಭಾವವೇ ಕವಿಯಾಗಬಯಸುವವನ ಮೊದಲ ಲಕ್ಷಣ" ಎನ್ನುವ ಸಾಲುಗಳು, ಶೇಷಾದ್ರಿಯವರ ಕವನದ ಶಕ್ತಿಯನ್ನು ಹೇಳುತ್ತದೆ. ಈ ಸಂಕಲನಕ್ಕೆ ಬೆನ್ನುಡಿಯನ್ನು ಖ್ಯಾತ ವಿಜ್ಞಾನ ಬರಹಗಾರರಾದ ಸುಧೀಂದ್ರ ಹಾಲ್ದೊಡ್ಡೇರಿ ಬರೆದಿದ್ದಾರೆ. 72 ಪುಟಗಳ ಈ ಕವನ ಸಂಕಲನದ ಬೆಲೆ 50 ರೂಪಾಯಿಗಳು.
ಐದನೇ ಪ್ರಕಟಣೆ - ಒನ್ ಮಿನಿಟ್ ಸಕ್ಸಸ್
ಕೊನೆಯ ಕ್ಷಣದ ಇನ್ನೇನು ಗೆದ್ದೇ ಬಿಟ್ಟೆ ಎನ್ನುವ ಅತಿಯಾದ ಆತ್ಮವಿಶ್ವಾಸ ನಮ್ಮನ್ನು ಗೆಲುವಿನಂಚಿನಿಂದ ಸೋಲಿನ ಪ್ರಪಾತಕ್ಕೆ ತಳ್ಳಿ ಬಿಡುತ್ತದೆ. ಇಲ್ಲಿ ನಾವು ಸೋಲಲು ಕಾರಣವಾಗಿರುವುದು ಕೊನೆಯ ಒನ್ ಮಿನಿಟ್. ಹಾಗೇ ನಮ್ಮನ್ನು ಗೆಲ್ಲಿಸಿ ಆಕಾಶದೆತ್ತರಕ್ಕೆ ನಿಲ್ಲಿಸುತ್ತಿದ್ದದ್ದು ಕೂಡಾ ಅದೇ ಒನ್ ಮಿನಿಟ್!! "ಏನ್ ಬಿಡು ಒಂದು ನಿಮಿಷ ತಾನೇ?" ಎಂದು ಒಂದು ನಿಮಿಷದ ಬಗ್ಗೆ ಕೇವಲವಾಗಿ ಮಾತನಾಡುವಾಗ, ನಮಗೆ ಈ ಒಂದು ನಿಮಿಷ ಎಷ್ಟು ಇಂಪಾರ್ಟೆಂಟ್ ಎನ್ನುವುದು ಗೊತ್ತಿರುವುದಿಲ್ಲ. ಹೀಗೆ ಗೆಲುವಿಗೆ ಕಾರಣವಾಗಬಲ್ಲ ಒನ್ ಮಿನಿಟ್ ಬಗ್ಗೆ ಪತ್ರಕರ್ತ ಕೆ.ಗಣೇಶಕೋಡೂರು ಅವರು ಬರೆದ ಪುಸ್ತಕ 'ಒನ್ ಮಿನಿಟ್ ಸಕ್ಸಸ್'. ಗೆಲುವಿಗೆ ಈ ಒಂದು ನಿಮಿಷ ಹೇಗೆ ಕಾರಣವಾಗುತ್ತದೆ ಮತ್ತು ಆ ಒಂದು ನಿಮಿಷವನ್ನುನಾವು ಹೇಗೆ ಬಳಸಿಕೊಳ್ಳಬೇಕು ಎಂದು ಹೇಳುವ ಈ 56 ಪುಟಗಳ ಈ ಪುಟ್ಟ ಪುಸ್ತಕದ ಬೆಲೆ 12 ರೂಪಾಯಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)